You are hereFeed aggregator / Sources / Kiran Jayanth
Kiran Jayanth
ನಮ್ಮೊಳಗೊಬ್ಬ ನಾಜೂಕಯ್ಯ
Mon, 05/24/2010 - 11:19ಕಳೆದವು ಮಂಗಳವಾರಗಳು
ಮರಳಿದವು ಗುರುವಾರಗಳು
ಅಬ್ಬಬ್ಬಾ ಮುಂಜಾನೆ ೮:೩೦ ಗೆ ಕರೀತೀರಲ್ರೀ ಶನಿವಾರ ಕೂಡ
ಭಾನುವಾರ ಕೂಡ ರಜೆ ಇಲ್ವಾ ಮ್ಯಾಡಂ?
ಸನ್ನಿವೇಲ್ ದೇಗುಲದ ಪ್ರೀತಿ ಭೋಜ್
ತಪ್ಪಿದರೆ ಅರ್ಚನ-ವತ್ಸ-ಶರ್ಮಿಳ ಮನೆಯವರ ಊಟ ಹರ್ ರೋಜ್
ಹೀಗೆ ಸಾಗಿತ್ತು ನಮ್ ರಿಹರ್ಸಲ್ಲು
"ಭಾವುಕ ಮಿಲನ"ದ ಮೊದಲ ಮೈಲಿಗಲ್ಲು
ಈ ನೆನಪಿನ ದೋಣಿಯಲ್ಲಿ ಸಿಕ್ಕರು ಹಲವರು
ಹೆಚ್ಚು ಹತ್ತಿರವಾದರು ಕೆಲವರು
ಮೊನಚಿನ ಮಾತಿನ ಶರ್ಮಿಳ ಮ್ಯಾಡಂ
ಒಮ್ಮೆ ಅಭ್ಯಾಸಕೆ ಹಾಜರಿ ತಪ್ಪಿದರೆ ಅವ್ರು ಬಹಳ ಗರಂ
ಕೂರಿಸಿ ಓದಿಸಿ ಶುರುವಾದ ಅಭ್ಯಾಸ ಸೆಷನ್ನು
ತಪ್ಪು ಒಪ್ಪುಗಳಿಗಿಲ್ಲ ಅಲ್ಲಿ ಮಾರ್ಜಿನ್ನು
ಅರಿವಿಲ್ಲದಂತೆಯೇ ತರಿಸಿತ್ತು ಹಾವ ಭಾವಗಳನ್ನು
ಕಲಿಸಿತ್ತು ನಟನೆಯ ಸೂಕ್ಷಾತಿಸೂಕ್ಷ್ಮಗಳನ್ನು
ಬಂದಿತ್ತಾಗಲೇ ತಾರೀಖು ಮೇ ಇಪ್ಪತ್ಮೂರು
ಹವ್ಯಾಸಿ ರಂಗಭೂಮಿ ಆಸಕ್ತರ "ನಾಟಕ ಚೈತ್ರ"ದ ಬ್ಯಾನ್ನರ್ರು
ಸೃಜನಶೀಲ ಸೌಜನ್ಯರ ಕಲೆ ಕೌಶಲ್ಯದ ಮ್ಯಾಜಿಕ್ಕು
ಸಂಗೀತ ಸರಸ್ವತಿ ಗಾರ್ಗಿ ಪಂಚಾಂಗಂ ಆಲಾಪವದು ಕರಾರುವಾಕ್ಕು
ಕೀಲಿಮಣೆಯ ಮೇಲೆ ಅಭಿಜಿತ್ ರ ಕೈಚಳಕ
ಬೆಳಕಿಗೆ ವಿನಯ್ ಹೆಗ್ಡೆ, ಮೈಕಿನ ಹಿಂದೆ "ಹೆಡ್ ಮೇಡಂ" ಮೋನಿಕ
ಮೇಕಪ್ ಮಾಡಿ ಮೊಗಕೆ ಮೆರುಗು ನೀಡಿದರು ವಿಜಯ
ಸಹಾಯ ಹಸ್ತ ಚಾಚಿದ ಶರಣ್, ವಿದ್ಯಾಧರ, ಕಿರಣ್ ಮಯ್ಯ, ಗಿರೀಶ್, ಗುಬ್ಬಿ, ಅಜಯ್ ಮತ್ತು ತಂಡ
ಟಿಕೇಟುಗಳ ಲೆಕ್ಕ ಇಟ್ಟು ಜೊತೆ ನೀಡಿದರು ಪ್ರಶಾಂತ್ ಪಡುಬಿದ್ರಿ
ಸುತ್ತೋಲೆಗಳ ಕಳಿಸಿ ಸಾಥ್ ನೀಡಿದವರು ಕನ್ನಡ ಕೂಟದ ಬಳಗ
ಅರಳಿದಳು ರಂಗಮಂಚೆ "ನಾಟಕ ಚೈತ್ರ"ಳಾಗಿ
ತೆರೆದಳು ಮತ್ತೊಂದು ಪ್ರಪಂಚವ ಸಭಿಕರ ನಿಬ್ಬೆರಗಾಗುವಂತೆ ಮಾಡಿ
ಒಬ್ಬರನೊಬ್ಬರ ಮೀರಿಸುವಂತೆ ನಟಿಸಿದ ಪಾತ್ರಧಾರಿಗಳು
"ನಮ್ಮೊಳಗೊಬ್ಬ ನಾಜೂಕಯ್ಯ"ನಿಗೆ ಜೀವ ತುಂಬಿದರು
"ಸಾರಿಗೆ ಸಚಿವ ಖದಂಗೆ ಸ್ವಲ್ಪ ರಸಿಕತೆ ಹೆಚ್ಚಿಗೆ, ಅದಕ್ ನಾ ಎನ್ ಮಾಡ್ಲಿ"
"ಬರೋಬ್ಬರಿ ಹೇಳಿದ್ರಿ ಸರಾ?"
ಉತ್ತರ ಕರ್ನಾಟಕ ಭಾಷೆಯಲ್ಲಿ ಮೊನಚಿನ ಮಾತುಗಳೊಂದಿಗೆ
ಮನ ಸೂರೆಗೊಂಡರು ನಾರಾಯಣ ಸ್ವಾಮಿಗಳು
"ಪಾಲಿಟಿಕ್ಸ್ ನಲ್ಲಿ ಇಷ್ಟು ವರ್ಷದಿಂದ ಇದೀನಲ್ಲಮ್ಮ"
ಖಾದಿ ವಸ್ತ್ರ ಗಾಂಧಿ ಟೊಪ್ಪಿಗೆ ತೊಟ್ಟು ಮಿರಿ ಮಿರಿ ಮಿಂಚಿ ನೆನಪಲಿ ಉಳಿವರು
ಹಗಲುವೇಷ ತೊಟ್ಟ ಭ್ರಷ್ಟ ಮಂತ್ರಿ ಮಿನಿಸ್ಟರ್ ಪಾಟೀಲರು
"ಹೂಮ್ ಸಾ, ನನ್ ಹೆಂಡ್ತಿ ಗಂಡ ನಾನೇ ಸಾ"
ಬದುಕಿನ ಕಟ್ಟಲೆಗಳನ್ನೇ ಅರಿಯದ ಮುಗ್ಧ ಫೋಟೋಗ್ರಾಫರ್
"ಸರ್, ನನ್ ಬ್ಯಾಂಕ್ ಅಲ್ಲಿ 200 ರುಪಾಯಿ ಇದೆ ಕೊಡ್ತೀನಿ, ನಿಮ್ ಸಾಲ ತೀರ್ಸಿಬಿಡಿ ಸರ್"
ಮುಗ್ಧ ನಿಷ್ಕಪಟ ಸಮಾಜ ಬಿಂಬಿಸುವ "ದುರ್ಬಲ ಕೊಂಡಿ" ಈ ಮಹಾದೇವ ಜಾಗಿರ್ದಾರ್
"ಗೋ ಗೋ ಗೋ, ನನ್ ನಾಯಿಗೆ ಸ್ನಾನ ಮಾಡಿಸಬೇಕು"
ಇಟಾಲಿಯನ್ ನಾಯಿ ಮೇಲಿನ ಹುಚ್ಚು ಪ್ರೀತಿಯ ಮುಖ ಒಂದೆಡೆ
"ಕೇಸ್ ಬುಕ್ ಮಾಡ್ಸಿ ಒಳಗೆ ಹಾಕ್ಸಿಬಿಡ್ತೀನಿ, ಹುಷಾರ್"
ಗುಡುಗಿ ಸದ್ದಡಗಿಸಿದ ಲಂಚಕೋರ ಡೈರೆಕ್ಟರ್ ದ್ವಿಮುಖ ಇನ್ನೊಂದೆಡೆ
"ನಮ್ ಫಾದರ್ ಗ್ರಾಂಡ್ ಫಾದರ್ ಇಬ್ರೂ ಹೋಗ್ಬಿಟ್ರಲ್ಲಾ?"
"ಯಲ್ಲಿ"
"ಲಂಡನ್"ನಲ್ಲಿ
ನಕ್ಕು ನಗಿಸಿದರು ರೀಟಾ ಚಬಲಾನಿ
"ಯಂಗ್ ಮ್ಯಾನ್, ಮೈ ನೇಮ್ ಇಸ್ ಕೆ.ಆರ್.ಚಬಲಾನಿ"
ಹೌಹಾರುವಂತೆ ಮಾಡಿದರು ಕಿಶೋರ್ ಆರ್ ಚಬಲಾನಿ
"ಡ್ಯಾಡಿ ನೀವು ಬೇರೇನೆ ಮೀಟಿಂಗ್ ಶುರು ಮಾಡ್ಬಿಟ್ರಲ್ಲಾ, ಹೀಗಾದ್ರೆ ನಂಗೆ ಬರ್ತ್-ಡೇನೆ ಬೇಡ"
ಉಲಿದಳು ನುಲಿದಳು ಮಿನಿಸ್ಟರ್ ಮಗಳು ನೀತಿ
ಸ್ವಾಮಿ ನಿಷ್ಠ ಪ್ರಭಾಕರನೊಬ್ಬ
"ಹೇಯ್ ನಕ್ಸಲೈಟ್, ನಿನ್ನ ರೆಡ್ ಲೈಟ್ ಮಾಡ್ಬಿಡ್ತೀನಿ"
ಬೆದರಿಸುವ ಪುಂಡ-ಪುಡಾರಿ ಗುರುದಾಸಪ್ಪ
"ಮೂರು ಪರ್ಸೆಂಟ್ ಹೆಚ್ಚಿಗೆ ಕೊಡಿ..ಪ್ರಭಾಕರ ಫಿನಿಶ್"
ಕಪಟಿ ಬೆಂಕಿ ಪಟ್ಟಣದ ಅಗ್ನಿಹೋತ್ರಿ
ನಿಷ್ಠೆಯಿಂದ ಯಶಸ್ಸು ಗಳಿಸಬೇಕೆಂಬ ನಾಯಕ ಶಿವಪ್ರಸಾದನ ಛಲವಾದಿ ಪಯಣ
ಪರಿಸ್ಥಿತಿಯ ಕೈಗೊಂಬೆಯಾಗಿ ನರಳುವ ನಾಯಕಿ ಮಾಲತಿಯ ಮೌನರೋದನ
ಭ್ರಷ್ಟ ವ್ಯವಸ್ಥೆಯ ಚಕ್ರವ್ಯೂಹದಲ್ಲಿ ಸಿಲುಕಿ ತನ್ನ ತತ್ವ-ಆದರ್ಶಗಳನ್ನು ಗಾಳಿಗೆ ತೂರುವ ನಾಯಕನ ನರಳುವ ಮನ
ಹಾದರಕ್ಕೆ ಇಳಿಯುವಂತ ಸ್ಥಿತಿ ತಂದೊಡ್ಡಿದ ವಿಧಿಯಾಟದಲ್ಲಿ ಕುದಿದು ಸೊರಗುವ ನಾಯಕಿಯ ಹೃದಯ
ತೆರೆಯ ಮೇಲೆ ಕೊನೆಯ ಪರದೆ ಬೀಳುತ್ತಾ ಹೋದಂತೆ, ಆ ಕೊನೆಯ ದೀಪವು ಆರುತ್ತ ಹೋದಂತೆ
ಪ್ರೇಕ್ಷಕ ತನ್ನೊಳಗೊಬ್ಬ ನಾಜೂಕಯ್ಯನಿದ್ದಾನೆಯೇ ಎಂದು ಶೋಧಿಸಲಣಿಯಾದನಂತೆ
ಮನ ಮುಟ್ಟಿದ ಕಥನ...ಕಿವಿಗಡಚಿಕ್ಕುವ ಕರತಾಡನ...
Categories: KKNC Members
ಮೇ ೨೩ರ "ನಾಟಕ ಚೈತ್ರ" – ೨ ಅತ್ಯುತ್ತಮ ನಾಟಕಗಳು!!
Mon, 05/17/2010 - 13:33
ಮೇ ೨೩ರ "ನಾಟಕ ಚೈತ್ರ"ದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ? ರಂಗಭೂಮಿ ಹವ್ಯಾಸಿ ಕಲಾವಿದರ ತಂಡ ನಿಮಗೆಂದು ೨ ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ. ಬೇ ಏರಿಯಾದ ಹೆಸರಾಂತ ನಿರ್ದೇಶಕಿ ಶರ್ಮಿಳ ವಿದ್ಯಾಧರರವರ ನಿರ್ದೇಶನದಲ್ಲಿ ಹಲವು ಪ್ರವೀಣ ಮತ್ತು ಪಳಗಿದ ಕಲಾವಿದರ ಜೊತೆ ಹೊಸ ಪ್ರತಿಭೆಗಳ ಸಮ್ಮಿಲನ ಈ ಕಾರ್ಯಕ್ರಮದ ವಿಶೇಷ.
ನಮ್ಮೊಳೊಗೊಬ್ಬ ನಾಜೂಕಯ್ಯ
‘ಮಾಯಾಮೃಗ’, ‘ಮುಕ್ತಾ ಮುಕ್ತಾ’ ಮತ್ತು ‘ಮನ್ವಂತರ’ಗಳಂಥಾ ಮರೆಯಲಾಗದ ಧಾರಾವಾಹಿಗಳನ್ನು ಕೊಟ್ಟ ಟಿ.ಎನ್. ಸೀತಾರಾಮ್ ಅವರು ಬರೆದ ಈ ನಾಟಕ, ನಿಷ್ಠೆಯಿ೦ದ ಯಶಸ್ಸು ಗಳಿಸಬೇಕೆಂಬ ಓರ್ವ ಉದ್ಯಮಿಯ ಪಯಣದಲ್ಲಿ ಭೃಷ್ಟ ವ್ಯವಸ್ಥೆಯ ಅನುಯಾಯಿಗಳು ಎಸೆಯುವ ಸವಾಲುಗಳು, ಆತ ಎದುರಿಸುವ ದ್ವಂದಗಳ ಮಾರ್ಮಿಕ ಘಟನೆಗಳನ್ನು ನಿರೂಪಿಸುತ್ತದೆ. ಛಲವಾದಿ ನಾಯಕ ದೃಢತೆಯಿ೦ದ ಆ ಕದನವನ್ನು ಗೆಲ್ಲಬಲ್ಲನೆ ಅಥವಾ ತಾನು ನ೦ಬಿದ ಆದರ್ಶಗಳನ್ನು ಗಾಳಿಗೆ ತೂರಿ ಸೋತು ಶರಣಾಗುವನೆ?
ಬನ್ನಿ, ವೀಕ್ಷೀಸಿ...ನಮ್ಮೆಲ್ಲರ ಮನದಾಳದಲ್ಲಿಯೂ ಓರ್ವ ನಾಜೂಕಯ್ಯನಿದ್ದಾನೋ ಎಂದು ಶೋಧಿಸಿ.....
ಕೊರಿಯಪ್ಪನ ಕೊರಿಯೋಗ್ರಫಿ
ಹನಿಗವನದ ಸಾಮ್ರಟರ ಎಂದು ಖ್ಯಾತರಾಗಿರುವ ಕವಿ ಎಚ್. ದುಂಡಿರಾಜ್ ಅವರು ರಚಿಸಿರುವ ಅನೇಕ ನಾಟಕಗಳಲ್ಲಿ ಕೊರಿಯಪ್ಪನ ಕೊರಿಯೋಗ್ರಫಿ ತಿಳಿ ಹಾಸ್ಯವನ್ನು ಬಳಸಿ ತಮ್ಮದೆ ಆದ ಸಾಹಿತ್ಯಲೋಕಕ್ಕೆ ಒಂದು ವಿಡಂಬನಾತ್ಮಕ ನೋಟವನ್ನು ಬೀರಿದ್ದಾರೆ. "ಅನುರಾಗ" ಪತ್ರಿಕೆಯವರು ಸಾಹಿತಿ ಕೊರಿಯಪ್ಪನವರನ್ನು ಸಂದರ್ಶನ ಮಾಡಲು ಇಚ್ಚಿಸಿದ್ದು ಆತನಿಗೆ ಒದಗಿ ಬರುವ ಅನಿರೀಕ್ಷಿತ ಅದೃಷ್ಟ. ಸಂದರ್ಶನ ನೀರೀಕ್ಷೆ ಕೊರಿಯಪ್ಪನ ಮನೆಯಲ್ಲಿ ಉಂಟು ಮಾಡುವ ಸಡಗರ ಹಾಗು ಸಂದರ್ಶನದ ಸಮಯದಲ್ಲಿ ಉಂಟಾಗುವ ಅನೇಕ ಹಾಸ್ಯಮಯ ಸನ್ನಿವೇಶಗಳಿಂದ ಈ ನಾಟಕವು ರಂಜನೀಯವಾಗಿದೆ
Categories: KKNC Members
ಮ್ಯಾಡ್ ಆಡ್ಸ್
Tue, 03/02/2010 - 22:39ಕನ್ನಡ ಕೂಟ ಉತ್ತರ ಕ್ಯಾಲಿಫೊರ್ನಿಯ ಏರ್ಪಡಿಸಿದ್ದ "ಸ್ನೇಹ ಸಪ್ತಮಿ" ಕಾರ್ಯಕ್ರಮದಲ್ಲಿ ನಾನು ನಿರ್ದೇಶಿಸಿ, ನಿರೂಪಿಸಿ ಮತ್ತು ಧ್ವನಿ ಕೊಟ್ಟ "ಮ್ಯಾಡ್ ಆಡ್ಸ್":
ಧ್ವನಿ: ಕಿರಣ್ ಜಯಂತ್ನಟಿಸಿದವರು: ಮಾಳವಿಕ, ಶ್ವೇತ, ಕ್ರಿಷ್ಣ ಸದಾಶಿವಂ, ಕ್ರಿಷ್ಣ ಪ್ರಸಾದ್, ಚೇತನ್, ಪವನ್ ಮತ್ತು ರಾಘವೇಂದ್ರ
ಭಾಗ 1:
http://www.youtube.com/watch?v=FkpWH9TTP8U
ಭಾಗ 2:
http://www.youtube.com/watch?v=2vE71ICupqU
Categories: KKNC Members







